ಫರೀದುಲ್ ಹಕ್ ಅನ್ಸಾರಿ ಇವರು ಫರೀದ್ ಅನ್ಸಾರಿ ಎಂದೇ ಜನಪ್ರಿಯವಾಗಿದ್ದಾರೆ. ಇವರು ಭಾರತೀಯ ಸ್ವಾತಂತ್ರ್ಯ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ ವಕೀಲ ಮತ್ತು ರಾಜಕಾರಣಿಯಾಗಿದ್ದಾರೆ. ಜಯಪ್ರಕಾಶ ನಾರಾಯಣ ಅವರ ಬರಹಗಳಲ್ಲಿ ವಿಶೇಷ ಉಲ್ಲೇಖವನ್ನು ಪಡೆದ ಪ್ರಮುಖ ಸಮಾಜವಾದಿ ನಾಯಕರಾಗಿದ್ದರು. ಅವರು ರಾಜ್ಯಸಭೆಯಲ್ಲಿ ಎರಡು ಬಾರಿ ಸಂಸದರಾಗಿ ಸೇವೆ ಸಲ್ಲಿಸಿದರು. == ಆರಂಭಿಕ ಜೀವನ == ಫರೀದುಲ್ ಹಕ್ ಅನ್ಸಾರಿ ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಯೂಸುಫ್‌ಪುರ ಪಟ್ಟಣದಲ್ಲಿ೧ ಜುಲೈ ೧೮೯೫ ರಂದು ಜನಿಸಿದರು. ಅವರ ತಂದೆ ನಿಜಾಮುಲ್ ಹಕ್ ಅನ್ಸಾರಿ ಜಮೀನ್ದಾರರಾಗಿದ್ದರು. ಫರೀದುಲ್ ಹಕ್ ದೆಹಲಿಯ ಸೈಂಟ್ ಸ್ಟೀಫನ್ಸ್ ಕಾಲೇಜು, ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವನ್ನು ಪಡೆದರು. ಭಾರತಕ್ಕೆ ಮರಳಿದ ನಂತರ ಅವರು ೧೯೨೫ ರಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಭ್ಯಾಸ ಮಾಡಲು ಪ್ರಾರಂಭಿಸಿದರು. ಅವರು ೧೯೨೭ ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆ ಸೇರಿದರು ಮತ್ತು ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮುಖ್ತಾರ್ ಅಹ್ಮದ್ ಅನ್ಸಾರಿಯವರ ಸೋದರಸಂಬಂಧಿಯಾಗಿದ್ದರು. == ವೃತ್ತಿ == ಫರೀದುಲ್ ಹಕ್ ಭಾರತೀಯ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಅನೇಕ ಬಾರಿ ಬಂಧನಕ್ಕೊಳಗಾದರು. ಕ್ವಿಟ್ ಇಂಡಿಯಾ ಚಳವಳಿಯ ಪ್ರಮುಖ ನಾಯಕರಲ್ಲಿ ಇವರು ಒಬ್ಬರಾಗಿದ್ದು ೧೯೪೨-೧೯೪೫ರ ಅವಧಿಯಲ್ಲಿ ಜೈಲುವಾಸ ಅನುಭವಿಸಿದ್ದರು. ಬ್ಯಾರಿಸ್ಟರ್ ಆಗಿ ಅವರು ಮೀರತ್ ಪಿತೂರಿ ಪ್ರಕರಣ ಟ್ರಯಲ್ (೧೯೨೯-೩೩) ನಲ್ಲಿ ಜವಾಹರ್ ಲಾಲ್ ನೆಹರು ಮತ್ತು ಕೈಲಾಶ್ ನಾಥ್ ಕಾಟ್ಜು ಅವರೊಂದಿಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸ್ಥಾಪಿಸಿದ ಕೇಂದ್ರ ರಕ್ಷಣಾ ಸಮಿತಿಯ ಸದಸ್ಯರಾಗಿ ವಾದಿಸಿದರು. ಕಾಂಗ್ರೆಸ್ ಪಕ್ಷದೊಳಗೆ ಅವರು ಎಡಪಂಥೀಯ ಪ್ರವೃತ್ತಿಗೆ ಹೆಸರುವಾಸಿಯಾಗಿದ್ದರು. ಅವರು ಕಾಂಗ್ರೆಸ್ ಸಮಾಜವಾದಿ ಪಕ್ಷದ ನೀತಿ ಮತ್ತು ಕಾರ್ಯಕ್ರಮ ಕರಡು ಸಮಿತಿಯ ಸದಸ್ಯರಾಗಿ ಆಯ್ಕೆಯಾದರು. ಭಾರತದ ಸ್ವಾತಂತ್ರ್ಯದ ನಂತರ ಅವರು ಸಮಾಜವಾದಿ ಪಕ್ಷಕ್ಕೆ (ಭಾರತ) ಸೇರಿದರು ಮತ್ತು ಅದರ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯರಾದರು. ೧೯೫೨ ರಲ್ಲಿ ಅವರು ಪ್ರಜಾ ಸಮಾಜವಾದಿ ಪಕ್ಷದ ಸದಸ್ಯರಾದರು ಮತ್ತು ೧೯೫೪-೧೯೫೮ ರ ಅವಧಿಯಲ್ಲಿ ಪ್ರಜಾ ಸಮಾಜವಾದಿ ಪಕ್ಷದ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ೧೯೫೨ ರಲ್ಲಿ ಮಾರ್ಷಲ್ ಟಿಟೊ ಅವರ ಆಹ್ವಾನದ ಮೇರೆಗೆ ಅವರು ಯುಗೊಸ್ಲಾವಿಯಕ್ಕೆ ಸಮಾಜವಾದಿ ನಾಯಕರ ನಿಯೋಗವನ್ನು ಮುನ್ನಡೆಸಿದರು, ಇದರಲ್ಲಿ ಕರ್ಪೂರಿ ಠಾಕೂರ್, ಬಂಕೆ ಬಿಹಾರಿ ದಾಸ್, ಶಾಂತಿ ನಾರಾಯಣ ನಾಯಕ್ ಮತ್ತು ಮಧು ದಂಡವತೆ ಸೇರಿದ್ದರು. ಫರೀದುಲ್ ಹಕ್ ಮತ್ತು ಅಸಫ್ ಅಲಿ ಕಾಂಗ್ರೆಸ್ ಪಕ್ಷದ ವಿಸ್ತರಣೆಗೆ ಪ್ರಮುಖ ಕೊಡುಗೆ ನೀಡಿದರು. ಅವರು ಸಾಮೂಹಿಕ ಸಂಪರ್ಕ ಅಭಿಯಾನವನ್ನು ಪ್ರಾರಂಭಿಸಿದರು, ಇದರ ಪರಿಣಾಮವಾಗಿ ಅನೇಕ ಮುಸ್ಲಿಂಮರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿದರು ಮತ್ತು ಮುಸ್ಲಿಂ ಲೀಗ್‌ನ ಸದಸ್ಯತ್ವವನ್ನು ತೊರೆದರು. ಸ್ವಾತಂತ್ರ್ಯದ ನಂತರ ಫರೀದುಲ್ ಹಕ್ ೧೯೫೮ ಮತ್ತು ೧೯೬೬ ನಡುವೆ ರಾಜ್ಯಸಭೆಯಲ್ಲಿ ಎರಡು ಅವಧಿಯ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದರು. ಪರಿಧಮನಿಯ ಹೆಪ್ಪುಗಟ್ಟುವಿಕೆಯಿಂದಾಗಿ ಅವರು ೪ ಏಪ್ರಿಲ್ ೧೯೬೬ ರಂದು ದೆಹಲಿಯಲ್ಲಿ ನಿಧನರಾದರು. == ಪಡೆದ ಸ್ಥಾನಗಳು == ೧೯೨೭ರಲ್ಲಿ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿಯಾಗಿದ್ದರು. ೧೯೫೪–೫೮ ಪ್ರಜಾ ಸಮಾಜವಾದಿ ಪಕ್ಷದ ಕಾರ್ಯದರ್ಶಿಯಾಗಿದ್ದರು. ೧೯೫೮–೬೪ ರಲ್ಲಿಸಂಸತ್ ಸದಸ್ಯ (ರಾಜ್ಯಸಭೆ)ರಾಗಿದ್ದರು. ೧೯೬೪–೬೬ ರಲ್ಲಿ ಸಂಸತ್ ಸದಸ್ಯ (ರಾಜ್ಯಸಭೆ)ರಾಗಿದ್ದರು. == ಉಲ್ಲೇಖಗಳು ==